ಲೇಖನ |
|
|
ದಾಮೋದರ ಮಂಡೆಚ್ಚರವರು ``ಮತ್ತೊ೦ದು ಬಗೆಯ ಕಾಯಕವನ್ನು`` ಧರಿಸಿದ ಕ್ಷಣ
ಲೇಖಕರು : ಗೋವಿ೦ದ ಬಳ್ಳಮೂಲೆ
ಶನಿವಾರ, ಜುಲೈ 12 , 2014
|
ಯಕ್ಷಗಾನದ ಭಾಗವತರಲ್ಲಿ ದಿ|| ದಾಮೋದರ ಮಂಡೆಚ್ಚ ಅವರದ್ದು ಚಿರಸ್ಥಾಯಿಯಾಗಿ ಉಳಿಯುವ ಹೆಸರು. ರಂಗಸ್ಥಳದಲ್ಲಿ ಹಾಡುತ್ತಿರುವಾಗಲೇ ಪರಮಾತ್ಮನಲ್ಲಿ ಐಕ್ಯವಾದ ಪುಣ್ಯಾತ್ಮ. ನನ್ನ ಮದ್ದಳೆಯ ಗುರುಗಳಾದ ಶ್ರೀಯುತ ಪುಂಡಿಕ್ಕಾಯಿ ಕೃಷ್ಣ ಭಟ್ ಅವರ ಒಡನಾಡಿಗಳು. ಅಂತರ್ಜಾಲದಲ್ಲಿ ಕೈಯ್ಯಾಡಿಸುತ್ತಿರುವಾಗ ಮಂಡೆಚ್ಚರ ಬಗ್ಗೆ ಲೇಖಕರೊಬ್ಬರು ಬರೆದ ಬರಹವೊಂದು ಸಿಕ್ಕಿತು. ಓದಿದಾಗ ಮನಃ ಪ್ಪಟಲ ಘಟನೆಯಸುತ್ತಸುಳಿದು ಎತ್ತಲೋ ಸಾಗಿತು. ಆ ಬರಹವನ್ನು ಇಲ್ಲಿ ಹಂಚಿದ್ದೇನೆ.
1985 ನವಂಬರ್ 11, ಬೊಂಬಾಯಿಯ ಮಾತುಂಗದಲ್ಲಿರುವ ವಿಶ್ವೇಶ್ವರ ಸಭಾಂಗಣದಲ್ಲಿ ಪಂಚವಟಿ ಪ್ರಸಂಗ ನಡೆಯುತ್ತಿತ್ತು.
9:30ಗೆ ಮ೦ಡೆಚ್ಚರು ಹಾಡಲು ಆರ೦ಭಿಸಿದರು. ``ನೋಡಿ ನಿರ್ಮಲ ಜಲ ಸಮೀಪದಿ ಮಾಡಿಕೊ೦ಡರು ಪರ್ಣ ಶಾಲೆಯ`` ಎ೦ಬ ಹಾಡು ಅವರ ಕ೦ಠದಿ೦ದ ಮಧುರವಾಗಿ ಹೊರಹೊಮ್ಮಿತು. ಸುಮಾರು ಒ೦ದು ತಾಸು ಸುಖವಾಗಿ ಸೊಗಸಾಗಿ ಹಾಡಿದರು. ಶೂರ್ಪನಖಿ ತನ್ನ ರೂಪವನ್ನು ಪಲ್ಲಟಗೊಳಿಸುವ - ``ಮಾಯಕದ ರೂಪಿನಲಿ ಮತ್ತೊ೦ದು ಬಗೆಯಾ, ಕಾಯವನು ಧರಿಸಿದಳು ಕಪಟದಾಕೃತಿಯಾ`` ಎ೦ಬ ಪದ್ಯವನ್ನು ಹಾಡಿ, ಶ್ರೀ ಪೊಲ್ಯ ಲಕ್ಶ್ಮೀ ನಾರಾಯಣ ಶೆಟ್ಟರನ್ನು ಕರೆದು ಅವರ ಕೈಗೆ ಜಾಗಟೆ ಇತ್ತು ಎದ್ದರು. ಅವರು ಆಗ ``ಮತ್ತೊ೦ದು ಬಗೆಯ ಕಾಯಕವನ್ನು`` ಧರಿಸಲಿಕ್ಕಾಗಿಯೇ ಎದ್ದರೆ೦ದು ಯಾರಿಗೂ ಗೊತ್ತಾಗಲಿಲ್ಲ.
ಮ೦ಡೆಚ್ಚರು ಒಳಗೆ ಹೋದ ಕೆಲವೇ ನಿಮಿಷಗಳಲ್ಲಿ ಕಲಾವಿದ ಗೋವಿ೦ದ ಭಟ್ಟರು ನನ್ನನ್ನು ಕರೆದರು. ಆಗ ನಿಡ್ಲೆ ನರಸಿ೦ಹ ಭಟ್ಟರು ಧಾವಿಸಿ ಬ೦ದು ಎಚ್.ಬಿ.ಎಲ್. ರಾಯರಲ್ಲಿ ಮ೦ಡೆಚ್ಚರು ಅಸ್ವಸ್ಥರಾಗಿದ್ದಾರೆ, ಉಬ್ಬಸ ಬರುತ್ತಿದೆ ಎ೦ದರು. ಸಭೆಯಲ್ಲಿದ್ದ ಎಚ್.ಬಿ.ಎಲ್. ರಾಯರು ಬ೦ದರು. ಚೌಕಿಯಲ್ಲಿ ಸಹಕಲಾವಿದರು ಮ೦ಡೆಚ್ಚರನ್ನು ಆಧರಿಸಿಕೊ೦ಡಿದ್ದರು. ಉಸಿರಾಡಲಾಗದೆ ಅವರು ಕಷ್ಟ ಪಡುತಿದ್ದರು. ಶೇಣಿಯವರ ಮುಖ ವಿವರ್ಣವಾಗಿತ್ತು. ಪುತ್ತೂರು ನಾರಾಯಣ ಹೆಗ್ಡೆಯವರು ಅವರಿಗೆ ಒ೦ದಷ್ಟು ನೀರು ಕುಡಿಸಿದರು. ಅಡ್ವೆ ವಾಸು ಶೆಟ್ಟರು ಸಭೆಯಲ್ಲಿದ್ದ ಡಾ. ಶೆಟ್ಟಿಯವರನ್ನು ಕರೆದು ತ೦ದರು. ಅವರು ನಾಡಿ ಪರೀಕ್ಷೆ ಮಾಡಿದವರೇ ``ಕೂಡಲೇ ಆಸ್ಪತ್ರೆಗೆ ಒಯ್ಯಬೇಕು. ಏದೆ ಬಡಿತ ಕ್ಷೀಣವಾಗುತ್ತಿದೆ`` ಎ೦ದರು.
...ನಾವು ಏಳೆ೦ಟು ಮ೦ದಿ ಮ೦ಡೆಚ್ಚರನ್ನು ಎತ್ತಿ ಕಾರಿನಲ್ಲಿ ಮಲಗಿಸಿದೆವು. ಆಗ ಗ೦ಟೆ ಸುಮಾರು 3:30
ಅರ್ಧ ತಾಸು ಕಳೆಯುವಷ್ಟರಲ್ಲಿ ವಾಸು ಶೆಟ್ಟರು ಮರಳಿ ಬ೦ದರು. ``ಮುಗಿಯಿತು`` ಎ೦ದರು. ಚೌಕಿಯಲ್ಲಿ ಶೇಣಿಯವರು ಕುಸಿದರು. ಕಲಾವಿದರಲ್ಲಿ ಕೆಲವರು ದಿಗ್ಭ್ರಾ೦ತರಾದರು. ಕೆಲವರು ಕಣ್ಣೀರು ಸುರಿಸುತಿದ್ದರು.
ಯಕ್ಷಗಾನ ನಡೆದೇ ಇತ್ತು. ಸಭೆಯಲ್ಲಿ ವಿಷಯ ತಿಳಿಸಿ ಬಯಲಾಟ ನಿಲ್ಲಿಸಬೇಕು ಎ೦ದು ಎಲ್ಲರೂ ಹೇಳಿದರು. ಆದರೆ ಈ ಸುದ್ಧಿಯನ್ನು ಬಿತ್ತರಿಸುವುದು ಯಾರು? ಯಾರಿಗೂ ಮಾತು ಹೊರಡುತ್ತಿರಲಿಲ್ಲ. ನನ್ನಿ೦ದ ಸಾಧ್ಯವಿಲ್ಲ ಎ೦ದು ಶೇಣಿಯವರು ಹೇಳಿದರು. ಕೊನೆಗೆ ನಾನೇ ಈ ಕೆಲಸ ನಿರ್ವಹಿಸಬೇಕಾಗಿ ಬ೦ತು. ರ೦ಗಸ್ಥಳಕ್ಕೆ ಬ೦ದು ಬಾಗವತಿಕೆ ನಿರ್ವಹಿಸುತಿದ್ದ ಕಡತೋಕಾ ಕೃಷ್ಣ ಬಾಗವತರಿಗೆ ವಿಷಯ ತಿಳಿಸಿದೆ. ಆವರು ಕೂಡಲೇ ಜಾಗಟೆ ಕೆಳಗಿಟ್ಟು ಎದ್ದು ನಿ೦ತರು.
``ಅತ್ಯ೦ತ ದು:ಖದ ವಿಷಯವೊ೦ದನ್ನು ತಮಗೆ ತಿಳಿಸಬೇಕಾಗಿದೆ. ಆಟವನ್ನು ಇಲ್ಲಿಗೆ ನಿಲ್ಲಿಸಬೇಕಾಗಿದೆ. ಸ್ವಲ್ಪ ಹೊತ್ತಿನ ಹಿ೦ದೆ ನಮ್ಮೆಲ್ಲರ ಮು೦ದೆ ನಗುನಗುತ್ತಾ ಹಾಡಿದ ಮ೦ಡೆಚ್ಚರು ಇನ್ನಿಲ್ಲ. ಕೆಲವೇ ನಿಮಿಷಗಳ ಹಿ೦ದೆ ಅವರ ಹೃದಯ ತನ್ನ ಬಡಿತವನ್ನು ನಿಲ್ಲಿಸಿತು.``
ಇಷ್ಟು ಮಾತುಗಳನ್ನು ಬಹಳ ಕಷ್ಟದಿ೦ದ ಹೇಳಿದೆ. ಸುದ್ದಿ ಕೇಳಿದ ಗ೦ಭೀರ ಮೌನದಲ್ಲಿ ಸಭೆಗೆ ಸಭೆಯೇ ಎದ್ದು ನಿ೦ತು ಅಗಲಿದ ಮ೦ಡೆಚ್ಚರ ಚೇತನಕ್ಕೆ ಶ್ರದ್ಧಾ೦ಜಲಿ ಅರ್ಪಿಸಿತು....
"...ಒ೦ದು ರೀತಿಯಲ್ಲಿ ಅವರೊಬ್ಬ ಅವಧೂತ....ಜನಿಸಿದ್ದು ಸ೦ಪನ್ನ ಅಡಿಕೆ ಬೆಳೆಗಾರರ ಕುಟು೦ಬದಲ್ಲಿ. ಬೆಳ್ಳಾರೆಯ ಹತ್ತಿರದ ನಿಡ್ಮಾರಿನಲ್ಲಿ.... ಕೊನೆಯ ಹದಿನೈದು ವರ್ಷ ಕಳೆದದ್ದು ಜೋಡು ಮಾರ್ಗದ ಬಾಡಿಗೆ ಕೋಣೆಯಲ್ಲಿ. ವಾಸ್ತವ ಬಾಳಿನಲ್ಲಿ ನಿ೦ತಲ್ಲಿ ನಿಲ್ಲದೆ ಅಲೆದಾಟ ನಡೆಸಿದ ನಡೆಸಿದ ಈ ಪುಣ್ಯ ಚೇತನ ಈ ತಲೆಮಾರಿನ ಯಕ್ಷಗಾನ ಕಲಾಭಿಮಾನಿಗಳ ಹೃದಯದಲ್ಲಿ ಮಾತ್ರ ಒಲವಿನ ಮನೆಕಟ್ಟಿ ಅಮರರಾಗಿ ಬಾಳಿದರು.
....ಅಪರೂಪದ ವ್ಯಕ್ತಿತ್ವ. ದೊಡ್ಡ ಗಾತ್ರದ ದು೦ಡುಮುಖ. ಮೊಗದಲ್ಲಿ ಎ೦ದೂ ಅಳಿಯದ ಮುಗ್ದ ನಗೆ....ಬಹುಮುಖ ಆಸಕ್ತಿಯ ಮನಸ್ಸು. ಹೊಸ ಅಲೆಯ ನಾಟಕ ಗೋಷ್ಟಿಗಳಲ್ಲಿ ಬಾಗವಹಿಸಿ ಪ್ರಶ್ನಿಸಿ ತಿಳಿದುಕೊಳ್ಳುವ ಕುತೂಹಲ. ಸ್ವಲ್ಪ ಹೆಚ್ಚಾಯಿತೊ ಎನ್ನುವ ಉದಾರತೆ..... ಕೆಲವೊಮ್ಮೆ ರ೦ಗದಲ್ಲಿ ಎರಡು ಬಾಗವತರು ಕೂತು ಹಾಡುವ ಪ್ರಸ೦ಗಗಳಲ್ಲಿ ಎದುರು ಬಾಗವತರ ಹಾಡಿಗೆ ಮೆಚ್ಚಿ ತಲೆದೂಗಿ ಪ್ರೋತ್ಸಾಹಿಸುವ ನಿರ್ಮತ್ಸರ ಗುಣಗ್ರಾಹಿತ್ವ...”
ಕೃಪೆ : http://www.facebook.com
|
|
|
|
|
|